ಕ್ಷೇತ್ರ
ಸೇವೆಗಳು
ಸೇವೆಗಳು
ವರ್ಷದಿಂದ ವರ್ಷಕ್ಕೆ ಶಬರಿಮಲೆಯಲ್ಲಿ ದರ್ಶನಕ್ಕಾಗಿ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದ್ದರೂ ಸಾಂಪ್ರದಾಯಿಕ ವಿಧಾನದಿಂದ ಕ್ಷೇತ್ರದಲ್ಲಿ ದರ್ಶನ ಮಾಡುವುದು ಹೇಗೆಂದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಇರುಮುಡಿ ಕಟ್ಟಿನಲ್ಲಿ ಸಾಮಗ್ರಿಗಳನ್ನು ಹೇಗೆ ಇರಿಸಬೇಕೆಂದೂ ತಿಳಿದಿಲ್ಲ. ಗುರುಸ್ವಾಮಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಬರಿಮಲೆ ಪ್ರಯಾಣವೂ ಒಂದು ಅವಸರದ ವ್ಯವಸ್ಥೆಯಾಗುತ್ತಿದೆ.
ಪಳ್ಳಿಕಟ್ಟನ್ನು ತಲೆಯಲ್ಲಿ ಇರಿಸಿಕೊಂಡು ಅಯ್ಯಪ್ಪ ಭಕ್ತರು ಶಬರಿಮಲೆಗೆ ಹೋಗುತ್ತಿದ್ದರು. ವನಾಂತರದ ಕ್ಷೇತ್ರವಾದುದರಿಂದ ಹಿಂದೆ ಇಲ್ಲಿ ಆಹಾರ ವಸ್ತುಗಳಾವುವೂ ಲಭಿಸುತ್ತಿರಲಿಲ್ಲ. ಆದುದರಿಂದ ಸೇವಾ ವಸ್ತುಗಳನ್ನೂ ಆಹಾರ ಪದಾರ್ಥಗಳನ್ನೂ ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದರು. ಪಳ್ಳಿಕಟ್ಟನ್ನು ಇರುಮುಡಿ ಕಟ್ಟು ಎಂದೂ ಹೇಳುತ್ತಾರೆ. ಮುಂಗಟ್ಟಿನಲ್ಲಿ (ಇರುಮುಡಿ ಕಟ್ಟದ ಮುಂಭಾಗ) ಸೇವಾ ವಸ್ತುಗಳೂ ಹಿಂಗಟ್ಟಿನಲ್ಲಿ ಆಹಾರಕ್ಕೆ ಬೇಕಾದ ವಸ್ತುಗಳನ್ನೂ ಇಡುತ್ತಾರೆ. ಪುರಾತನ ಕಾಲದಲ್ಲಿ ಚಾಪೆ, ಕಂಬಳಿ ಹಾಗೂ ಆಹಾರ ತಯಾರಿಗೆ ಬೇಕಾದ ಪಾತ್ರೆಗಳನ್ನೂ ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದರು. ಅಂದು ಇರುಮುಡಿ ಕಟ್ಟದ ಬಣ್ಣವನ್ನು ನೋಡಿ ಕನ್ನಿ ಸ್ವಾಮಿಯೋ ಎಂದು ನಿಶ್ಚಯಿಸುತ್ತಿದ್ದರು. ಸಾಮಾನ್ಯವಾಗಿ ಕನ್ನಿಸ್ವಾಮಿಗಳು ಕೆಂಪು ಬಣ್ಣದ ರೇಶ್ಮೆ ಬಟ್ಟೆಯಿಂದ ತಯಾರಿಸಿದ ಇರುಮುಡಿ ಕಟ್ಟನ್ನು ಹೊತ್ತಿರುತ್ತಿದ್ದರು. ಇತರರು ಬಿಳಿ ಬೈರಾಸಿನಿಂದ ತಯಾರಿಸಿದ ಇರುಮುಡಿ ಕಟ್ಟನ್ನು ಹೊಂದಿರುತ್ತಾರೆ.
ಅಂತಹ ಕಾಲ ಕಳೆದು ಹೋಯಿತು. ಮುಂಗಟ್ಟಿನಲ್ಲಿ ಇರಿಸಬೇಕಾದ ಸೇವಾ ಸಾಮಗ್ರಿಗಳು ಇವುಗಳಾಗಿವೆ: ವೀಳ್ಯದೆಲೆ, ಅಡಿಕೆ, ನಾಣ್ಯ, ತೆಂಗಿನಕಾಯಿ, ತುಪ್ಪದ ಕಾಯಿ, ಕರ್ಪೂರ, ಅರಸಿನ ಹುಡಿ, ಅವಲಕ್ಕಿ, ಹೊದಳು (ಅರಳು), ಕಲ್ಲುಸಕ್ಕರೆ, ಒಣದ್ರಾಕ್ಷೆ, ಜೇನುತುಪ್ಪ, ಪನ್ನೀರು, ರಂಗೋಲಿ ಹುಡಿ, ಕದಳೀ ಬಾಳೆಹಣ್ಣು, ಭಸ್ಮ, ಬೆಳ್ತಿಗೆ ಅಕ್ಕಿ, ಕರಿಮೆಣಸು, ಹೊಗೆ ಸೊಪ್ಪು ಮೊದಲಾದುವುಗಳು. ಇದರೊಂದಿಗೆ ಕರುಪ್ಪು ಸ್ವಾಮಿ ಮತ್ತು ಕಡುತ್ತ ಸ್ವಾಮಿಗೆ ಸೇವೆಗಾಗಿ ಗಾಂಜಾದ ಕಟ್ಟನ್ನೂ ಕೊಂಡುಹೋಗುವ ಸಂಪ್ರದಾಯವಿತ್ತು.
ವೀಳ್ಯದೆಲೆ, ಅಡಿಕೆ, ತೆಂಗಿನಕಾಯಿ, ತುಪ್ಪದ ಕಾಯಿ ಎಂಬಿವುಗಳನ್ನು ಶರಣು ಘೋಷದೊಂದಿಗೆ ಮೊದಲು ಕಟ್ಟದಲ್ಲಿ ತುಂಬಿಸಬೇಕು. ಅಯ್ಯಪ್ಪನಿಗೆ ಅಭಿಷೇಕಕ್ಕಾಗಿ ತುಪ್ಪದ ಕಾಯಿ. ಮಲೆಯಾತ್ರೆಯನ್ನು ಮುಗಿಸಿ ಬಂದ ಅಯ್ಯಪ್ಪ ಭಕ್ತರು ವೀಳ್ಯದೆಲೆ, ಅಡಿಕೆ, ನಾಣ್ಯಗಳನ್ನು ತಮ್ಮೂರಿನ ಕ್ಷೇತ್ರಗಳಿಗೆ ಸಮರ್ಪಿಸಬೇಕು.
ಕಟ್ಟದಲ್ಲಿ ಒಂದಕ್ಕಿಂತ ಹೆಚ್ಚು ತೆಂಗಿನಕಾಯಿಯನ್ನು ಇಡುವವರೂ ಇದ್ದಾರೆ. ಕರಿಮಲೆ ಮೂರ್ತಿ, ಪಂಪಾ ಗಣಪತಿ, ಹದಿನೆಂಟು ಮೆಟ್ಟಿಲು ಎಂಬೆಡೆಗಳಲ್ಲಿ ತೆಂಗಿನಕಾಯಿ ಒಡೆಯಲಿಕ್ಕಿದೆ. ಕರ್ಪೂರ ಪ್ರಿಯನಾದುದರಿಂದ ಎಲ್ಲ ಮೆಟ್ಟಿಲುಗಳಲ್ಲಿಯೂ ಅಯ್ಯಪ್ಪ ಭಕ್ತರು ಕರ್ಪೂರ ಉರಿಸಿ ಶರಣು ಘೋಷವನ್ನು ಮೊಳಗುವರು. ನಾಗಯಕ್ಷಿ, ನಾಗರಾಜ ಮತ್ತು ಮಾಳಿಗಪುರದಲ್ಲಿ ಅರಸಿನ ಹುಡಿಯನ್ನು ಚಿಮುಕಿಸುವರು. ಮಾಳಿಗಪುರಂ ದೇವಾಲಯಕ್ಕೆ ಸುತ್ತಲೂ ತೆಂಗಿನಕಾಯಿಯನ್ನು ಉರುಳಿಸುತ್ತಾರೆ. ಸಂತಾನ ಸೌಭಾಗ್ಯಕ್ಕಾಗಿ ಅವಲಕ್ಕಿ, ಹೊದಳು, ಕಲ್ಲುಸಕ್ಕರೆ, ಒಣದ್ರಾಕ್ಷೆ, ರಂಗೋಲಿ ಹುಡಿ ಮೊದಲಾದುವುಗಳು ಕಡುತ್ತ ಸ್ವಾಮಿಯ ಸೇವೆ. ಹೊಗೆಸೊಪ್ಪು ಕರುಪ್ಪು ಸ್ವಾಮಿಗಾದರೆ ಕರಿಮೆಣಸು ವಾವರ ಸ್ವಾಮಿಗೆ.
ಬೆಳ್ತಿಗೆ ಅಕ್ಕಿ, ಬೆಲ್ಲ, ಕದಳಿ ಬಾಳೆಹಣ್ಣು ಮೊದಲಾದುವುಗಳು ಅಯ್ಯಪ್ಪ ಸ್ವಾಮಿಯ ನೈವೇದ್ಯಕ್ಕಾಗಿ. ಹಿಂಗಟ್ಟಿನಲ್ಲಿರುವ ಅಕ್ಕಿಯನ್ನು ಸ್ವತಃ ಅನ್ನ ಮಾಡಿ ಊಟ ಮಾಡಬಹುದು. ಇದರೊಂದಿಗೆ ಚಟ್ನಿ ಪುಡಿ, ಉಪ್ಪಿನಕಾಯಿ, ಕರಿದ ಹಪ್ಪಳ, ಒಂದು ತುಂಡು ತೆಂಗಿನಕಾಯಿ ಇದ್ದರೆ ಊಟ ಭರ್ಜರಿ.